
ಬ್ರಹ್ಮಾವರ -ಹೋಳಿ ಹುಣ್ಣಿಮೆ ಕುಡುಬಿ ಮತ್ತು ಮರಾಟಿ ಸಮುದಾಯದ ಒಂದು ವಿಶಿಷ್ಟ ಜಾನಪದ ಆಚರಣೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಈ ಆಚರಣೆಯ ನ್ನು ಬಲು ಸಡಗರದಿಂದ ಆಚರಿಸುತ್ತಾರೆ. ಗೋವಾದ ಶ್ರೀ ಮಲ್ಲಿಕಾರ್ಜುನ ದೇವರು ಕುಡುಬಿ ಜನಾಂಗದ ಆರಾಧ್ಯ ದೇವರಾಗಿದ್ದು,ಹೋಳಿ ಹಬ್ಬದ ಸಮಯದಲ್ಲಿ ಮಲ್ಲಿಕಾರ್ಜುನ ದೇವರನ್ನು ಸ್ತುತಿಸಿ ಹಾಡುತ್ತಾರೆ, ವರ್ಷಕ್ಕೊಮ್ಮೆ 5ದಿನಗಳ ಕಾಲ ಆಚರಿಸುವ ಹೋಳಿ ಕೇವಲ ಜನಪದ ಆಚರಣೆ ಮಾತ್ರ ಆಗಿರದೆ ಕುಡುಬಿ ಸಮುದಾಯದ
ಅವರದೇ ವಿಧಿ ವಿಧಾನದ ಭಕ್ತಿ ಪ್ರಧಾನ ಹಬ್ಬವೂ ಆಗಿದೆ ಹೋಳಿ ಆಚರಣೆಯ ದನಗಳಲ್ಲಿ ನೆಂಟರಿಷ್ಟ ರು ಒಂದೆಡೆ ಸೇರಿ ನಲಿಯುತ್ತಾರೆ, ಕುಣಿಯುತ್ತಾರೆ ಸಂತೋಷ ಹಂಚಿ ಕೊಳ್ಳುತ್ತಾರೆ.
ಆ ಮೂಲಕ ಈ ಮಣ್ಣಿನ ಜನಪದ ಸಂಸ್ಕೃತಿಯನ್ನು ನಮಗೂ ನೆನಪಿಸುತ್ತಾರೆ ಕುಡುಬಿ ಸಮುದಾಯದ ಕೂಡುಕಟ್ಟು ಗಳಲ್ಲಿ ಗುರಿಕಾರರ ಮುಂದಾಳತ್ವದಲ್ಲಿ ನಡೆಯುವ ಈ ಆಚರಣೆ ಗುಮ್ಮಟೆ ಗಳನ್ನೂ ಬಳಸಿಕೊಂಡು ತಮ್ಮ ಧಾರ್ಮಿಕ ಚೌಕಟ್ಟಿಗೆ ಧಕ್ಕೆ ಬರದಂತೆ ವೇಷಭೂಷಣ ಧರಿಸಿ ಸ್ವ ಜಾತಿಯ ಸಮುದಾಯ ತಂಡಗಳು ಗ್ರಾಮ
ದೇವರ ಸನಧಿಗೆ ಬಂದು ಸೇವೆ ಪ್ರಾರಂಭಿಸಿ ಅಲ್ಲಿಂದ ತಂಡಗಳನ್ನು ರಚಿಸಿಕೊಂಡು ಬರೀ ಕಾಲ್ನಡಿಗೆಯಲ್ಲೇ ನಡೆದು ತಮ್ಮ ಆಡುಭಾಷೆಯಲ್ಲಿ ಹಾಡುಗಳನ್ನು ಹಾಡಿಕೊಂಡು ತಮ್ಮ ಸಮುದಾಯ ಮತ್ತು ಆಹ್ವಾನಿತರ ಮನೆಗಳಿಗೆ ತೆರಳಿ ಸುಂದರವಾಗಿ ನರ್ತಿಸುತ್ತಾರೆ ಕೋಲಾಟ ಕುಣಿಯುತ್ತಾರೆ ಪ್ರದರ್ಶನ ನೀಡಿದ ಮನೆಯಿಂದ ಅಕ್ಕಿ ಕಾಯಿ ಕಾಣಿಕೆಯನ್ನು ಪಡೆದು ಒಳಿತಾಗಲೆಂದು ಹರಸುತ್ತಾರೆ.
ಉಡುಪಿ ಜಿಲ್ಲೆಯ ಕೊಕ್ಕರ್ಣೆ,ನಾಲ್ಕೂರು ಗೋಳಿಯಂಗಂಡಿ ಬೆಳೆ ಹಾಲಾಡಿ ಯಡ್ತಾಡಿ, ಮಂದಾರ್ತಿ ನಡೂರು ಈ ಭಾಗದಲ್ಲಿ ಹೆಚ್ಚಾಗಿ ಈ ಆಚರಣೆ ಕಂಡು ಬರುತ್ತದೆ.
* ನಡೂರು ಕಂಡಿಕೆ ಹೋಳಿ ಕೂಡುಕಟ್ಟು*:
ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕು, ಕಾಡೂರು ಗ್ರಾಮ ಪಂಚಾಯತ್,ನ ನಡೂರು ಗ್ರಾಮದ ನೆಕ್ಕರ್ಕ, ಕಂಡಿಕೆ ಹೋಳಿ ಕೂಡುಕಟ್ಟು ಉಡುಪಿ ಜಿಲ್ಲೆಯ 46 ಕೂಡುಕಟ್ಟುಗಳಲ್ಲಿ ಒಂದು. ಈ ಕೂಡು ಕಟ್ಟಿನವರು ಹಿರಿಯರು ತಲಾ-ತಲಾಂತರಗಳಿಂದ ಯಾವುದೇ ಆಡಚಣೆ ಇಲ್ಲದೇ, ಪ್ರತಿ ವರ್ಷ ಹೋಳಿ ಹಬ್ಬ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.
ಈ ಹೋಳಿ ಕೂಡುಕಟ್ಟಿನಲ್ಲಿ ಶೀನ ನಾಯ್ಕ ನೆಕ್ಕರ್ಕ ಇವರು ಗುರಿಕಾರರ ಮನೆಯವರಾಗಿದ್ದು , ಬಸವ ನಾಯ್ಕ ಹೊಸ್ಮಕ್ಕಿ ಮಂದಾರ್ತಿ ಇವರು ಹೋಳಿ ಕೂಡುಕಟ್ಟಿನ ಯಜಮಾನರ ಹಕ್ಕನ್ನು ಹೊಂದಿರುತ್ತಾರೆ ಹಾಗು ಗೋಪಾಲ ನಾಯ್ಕ ಕಂಡಿಕೆ ಇವರು ಗುಮ್ಮಟೆ ಹಕ್ಕುದಾರರಾಗಿರುತ್ತಾರೆ . ಕಂಡಿಕೆ, ಬರದಕಲ್ಲು, ಮಂದಾರ್ತಿ ,ಹೊಸ್ಮಕ್ಕಿ, ನೆಕ್ಕರ್ಕ, ಮೂಡುಬೆಟ್ಟು, ಕೂರಾಡಿ, ಕಲ್ಲಾಂಟಿ ಪ್ರದೇಶವು ಕಂಡಿಕೆ ಹೋಳಿ ಕೂಡು ಕಟ್ಟು ವ್ಯಾಪ್ತಿಯಲ್ಲಿ ಬರುತ್ತದೆ , ಇವರೆಲ್ಲರೂ ಏಕಾದಶಿಯ ದಿನ ಬೆಳಗಿನ ಜಾವಕ್ಕೂ ಮುನ್ನವೇ ನೆಕ್ಕರ್ಕ ಹೋಳಿ ಕೂಡು ಕಟ್ಟು ಗುರಿಕಾರರಾದ ದಿ.ಗಂಗ ನಾಯ್ಕರ ಮಗನಾದ ಶೀನ ನಾಯ್ಕರ ಮನೆಗೆ ಬಂದು ಪ್ರಥಮ ದಿನದ ಹೋಳಿ ಹಬ್ಬದ ಹಾಡುಗಳು ಮೂಲಕವೇ ವಿಧಿ-ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ ನಂತರ ಉಳಿದ ಗ್ರಾಮಗಳಿಗೆ ತೆರಳುತ್ತಾರೆ.
ಇಂದಿನ ಆಧುನಿಕ ಮಾಧ್ಯಮಗಳ ಸುಳಿಯಲ್ಲಿ ನಮ್ಮಜಾನಪದ ಪಕಾರಗಳು ನೆಲೆ ಬೆಲೆ ಕಳೆದುಕೊಳ್ಳದಂತೆ ಉಳಿಸಿ ಬೆಳೆಸಿಕೊಂಡು ಹೋಗುವ ಬಹು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಇದು ನಮಗಾಗಿ ಅಲ್ಲ ಮುಂದಿನ ಪೀಳಿಗೆಗಾಗಿ ..ಭವಿಷ್ಯದ ಬೇರುಗಳಿಗಾಗಿ .